ಎಕೊನೊಮಿಕ್ ಸರ್ವೇ


ಈ ಬಾರಿ ಎಲ್ಲರಿಗೂ ಸಹಜವಾಗಿ ಬಜೆಟ್ ಬಗ್ಗೆಯೇ ಗಮನವಿದೆ. ಬಜೆಟ್ ಬಿಟ್ಟಹಾಕಿ …ಆದರೆ ಒಮ್ಮೆ ಸರಕಾರ ಮಂಡಿಸಿದ ಎಕೊನೊಮಿಕ್ ಸರ್ವೇ ಮಾತ್ರ ಖಂಡಿತ ಮಿಸ್ ಮಾಡ್ಕೋಬೇಡಿ. ಅತ್ಯಂತ ಮಹತ್ವದ್ದು ಅದು. ಆದ್ರಲ್ಲಿ ಈ ಕೆಳಗಿನ ಅಂಶಗಳು ನನ್ನನ್ನ ಸೆಳೆದಿವೆ. ಪ್ರತಿಯೊಬ್ಬ ಪ್ರಜೆ ಇತ್ತ ಗಮನ ಹರಿಸಬೇಕು.

AI ನಿಂದಾಗಿ ಅನೇಕ ಉದ್ಯೋಗಗಳಿಗೆ ಕಂಟಕ ಎದುರಾಗಲಿದೆ ಎಂಬ ಆತಂಕ ಸರ್ವೆಯಲ್ಲಿ ಕಂಡು ಬರುತ್ತದೆ.
ಇದು ಖಂಡಿತ ಹೌದು. ಕೂತು ಯಾಂತ್ರಿಕವಾಗಿ ಮಾಡುವಂತ ತುಸು ಬುದ್ದಿ ಮತ್ತೆಯ ಕೆಲಸಗಳನ್ನು ಬಾಟ್ ಗಳೇ ಮಾಡುವುದರಿಂದ ಜನ ಇಲ್ಲಿ ಬೇಕಾಗುವುದಿಲ್ಲ.

ಮೊದಲೇ ನಿರುದ್ಯೋಗ ತಾಂಡವ ಆಡುತ್ತಿರುವಾಗ, ಸರಕಾರ ಈ ನಿಟ್ಟಿನಲ್ಲಿ ಅತ್ಯಂತ ಪ್ರಯಾಸ ಪಡುವುದರ ಹಿನ್ನೆಲೆಯಲ್ಲಿ ಇದ್ದ ಕೆಲಸಗಳೂ AI ನಿಂದಾಗಿ ಕಮ್ಮಿ ಆದರೆ ಗಾಯದ ಮೇಲೆ ಬರೆ ಹಾಕಿದಂತೆ.

ಈ ನಿಟ್ಟಿನಲ್ಲಿ ಯುವ ಜನಾಂಗದ ಬಗ್ಗೆ ಕೂಡ ಸರ್ವೇ ಹೀಗೆ ಹೇಳುತ್ತದೆ.
ದುರಿತ ಕಾಲದಲ್ಲಿ ಯುವ ಜನತೆ ಸಾಮಾಜಿಕ ಮಾಧ್ಯಮ ಹಾಗೂ ಸ್ಕ್ರೀನ್ ಟೈಮ್ ಹೆಚ್ಚಿಸಿಕೊಂಡು, ಕಸರತ್ತು ಇಲ್ಲದ ಜೀವನ ಶೈಲಿ , ಜಂಕ್ ಆಹಾರ ಪದ್ದತಿಗೆ ಜೋತು ಬೀಳುತ್ತಿರುವುದು ಈ ಎಲ್ಲ ಸೇರಿ productivity ಕುಂಠಿತಗೊಂಡು ಅರ್ಥ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಒತ್ತಿ ಹೇಳುತ್ತದೆ. ಒಂದು ಕಡೆ ಹೊಸ ಉದ್ಯೋಗ, ಕೌಶಲ್ಯ , AI ಅಪಾಯ ಒಂದೆಡೆ ಹಾಗೂ ಯುವ ಜನತೆಯ ಈ ವರಸೆ ಇನ್ನೊಂದೆಡೆ.. concerns make sense.

ಸತತವಾಗಿ ವೈಫಲ್ಯ ಕಾಣುತ್ತಿರುವ ಒಂದು ಕ್ಷೇತ್ರವೆಂದರೆ manufacturing. ಪಾಪ ಸರಕಾರ ತುಂಬಾ ಪ್ರಯತ್ನ ಮಾಡಿದರೂ ಫಲಪ್ರಧ ಆಗಲಿಲ್ಲ. ಸರ್ವೆ ಪ್ರಕಾರ ನಮ್ಮ ಶತ್ರು ಎಂದೇ ಬಿಂಬಿಸಲ್ಪಟ್ಟ ಚೈನಾ ಭಾರತದ ಮ್ಯಾನುಫ್ಯಾಕ್ಚರಿಂಗ್ ಯಶೋಗಾಥೆಯಲ್ಲಿ ಬಹು ದೊಡ್ಡ ಪಾತ್ರ ವಹಿಸಬಲ್ಲುದು ಎಂಬ ಅಚ್ಚರಿಯ ಅಂಶ ಕೂಡ ಇದೆ.
ಒಂದು ವೇಳೆ ನೀವು ಚೈನಾ ಪ್ಲಸ್ ಒನ್ ಎಂಬುದರ ಬಗ್ಗೆ ಕೇಳಿದ್ದರೆ ಅದು ದೊಡ್ಡ ಅಚ್ಚರಿ ಅಲ್ಲ. ಇದರ ಪ್ರಕಾರ ಜಗತ್ತಿನ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದನೆಗಾಗಿ ಕೇವಲ ಚೈನಾದ ಮೇಲೆ ಅವಲಂಬಿತವಾಗುವುದು ಬಿಟ್ಟು ಬೇರೆ ದೇಶಗಳಿಂದ ಕೂಡ ಆಮದು ಮಾಡಿಕೊಳ್ಳುವುದು. ಚೈನಾ ಪ್ಲಸ್ ಒನ್ ಉಳಿದ ದೇಶಗಳಿಗೆ ಒಂದು ಸದಾವಕಾಶ. ಹಾಗೆಂದು ಚೈನಾದ ಉತ್ಪಾದನಾ ಸಾಮರ್ಥ್ಯ ಕೌಶಲ್ಯವನ್ನು ರಾತ್ರೋ ರಾತ್ರಿ ಸೃಷ್ಟಿಸಲಾಗುವುದೇ ? ಇಲ್ಲ. ಆಗ ಚೈನಾ ಅಂತಹ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿ ಅಲ್ಲಿಂದ ಉತ್ಪಾದನೆಗಳನ್ನು ಮಾರುವುದು. ಇದು ಚೈನಾಗೆ ಅನಿವಾರ್ಯ ಆದರೆ ಆ ದೇಶಕ್ಕೆ ತಂತ್ರಜ್ಞಾನ ವರ್ಗಾವಣೆ, ಉದ್ಯೋಗ ಸೃಷ್ಟಿ ಇತ್ಯಾದಿ ಲಾಭ. ಮಲೇಶಿಯಾ ಹೀಗೆ ಮಾಡಿ ಒಳ್ಳೆಯ ಲಾಭ ಮಾಡಿಕೊಳ್ಳುತ್ತಿದೆ.
ಚೈನಾಗೆ ಇಷ್ಟ ಇಲ್ಲದಿದ್ದರೂ ಅದಕ್ಕೆ ನಮ್ಮ ದೇಶದಲ್ಲಿ FDI ಹೂಡಿಕೆ ಮಾಡಿ ಇಲ್ಲಿ ಉತ್ಪಾದಿಸಿ ಮಾರಾಟ ಮಾಡಲು ಹೇಳಿದರೆ ನಮಗೇ ಲಾಭ. ಚೈನಾ ಪ್ಲಸ್ ಒನ್. ಆ ಒನ್ ನಲ್ಲಿ ಭಾರತ ಇರಬೇಕು. ಇಂಡಿಯಾ ಸೆಂಟ್ರಿಕ್ ಸಪ್ಲೈ ಚೈನ್ ಹುಟ್ಟಿಹಾಕಬೇಕು. ಅಂದ ಹಾಗೆ ಚೈನಾ ಬಾರ್ಡರ್ ವಿವಾದ, ಹಾವು ಮುಂಗುಸಿ ಕಥೆ ಕೂಡ ಸಂಭಾಳಿಸಿಕೊಂಡು ಹೋಗುವುದು ಸರಕಾರಕ್ಕೆ ಸವಾಲು.
ಸರ್ವೆ ಹೇಳಿರೋ ಇನ್ನೊಂದು ವಿಷಯ ಹಣದುಬ್ಬರ ನಿಯಂತ್ರಣದಲ್ಲಿದ್ದರೂ ಆಹಾರದ ಹಣದುಬ್ಬರ ಸಾಕಷ್ಟು ಆತಂಕಕಾರಿ. ಹವಾಮಾನ ವೈಪರೀತ್ಯ ,ಬೆಳೆ ನಾಶ ,ಅವಶ್ಯ ಆಹಾರ ಸಾಮಗ್ರಿಗಳ ದಾಸ್ತಾನು ಕಮ್ಮಿ ಇರುವುದು ಇವಕ್ಕೆ ಮುಖ್ಯ ಕಾರಣಗಳಂತೆ. ಒಂದು ಸಮಾಧಾನಕರ ಸಂಗತಿ ಎಂದರೆ ಅಭಿವೃದ್ಧಿ ದರ ಆರೂವರೆ ಏಳು ಪ್ರತಿಶತ ಆಗುವ ಸಂಭವನೀಯತೆ.
ಇನ್ನೂ ವಿತ್ತೀಯ ಕೊರತೆ ಹಾಗೂ ಕರೆನ್ಸಿ ಸ್ಥಿರತೆಯ ವಿಷಯದಲ್ಲಿ ಉಳಿದ ಮಾರ್ಕೆಟ್ಗಳಿಗೆ ಹೋಲಿಸಿದರೆ ಭಾರತದ ಪರಿಸ್ಥಿತಿ ಧನಾತ್ಮಕವಾಗಿದೆ ಎಂಬ ಅಂಶಗಳನ್ನೂ ಸರ್ವೇ ತೋರಿಸುತ್ತದೆ.

ಅಂದ ಹಾಗೆ ಎಲ್ಲ ಯುವ ಜನಾಂಗ ಸದ್ಯ ಯೂಟ್ಯೂಬ್ ಫೇಸ್ಬುಕ್ ಇನ್ಸ್ಟಾಗ್ರಾಮ್ ನಲ್ಲೆ ಒಕ್ಕರಿಸಿ ಕಂಟೆಂಟ್ ಕೆರಿಯರ್ ನಲ್ಲಿ ಹೋಗ್ತಿವಿ ಅಂದ್ರೂ ಕಷ್ಟ.. ನೆನಪಿರಲಿ


Leave a Reply

Your email address will not be published. Required fields are marked *